Description
ಈ ಕಥೆಯಲ್ಲಿ ಬರುವ ಎಲ್ಲ ಪಾತ್ರಗಳು ಹಾಗೂ ಸನ್ನಿವೇಶಗಳು ಕೇವಲ ಕಾಲ್ಪನಿಕ ಒಂದು ಕಾಲ ಆ ಕಾಲದಲ್ಲಿ ಜನರಲ್ಲಿ ಆಡಂಬರವಿಲ್ಲದ ಆಚರಣೆ ಇತ್ತು. ತೋರಿಕೆ ಇಲ್ಲದ ನೇರ ನಡೆ ನುಡಿ ಇತ್ತು. ವೈಮನಸ್ಯವಿಲ್ಲದ ವಿಚಾರ ಬೇಧಗಳಿತ್ತು. ಮೌಢ್ಯತೆ ಇಲ್ಲದ ನಂಬಿಕೆ ಇತ್ತು. ಬಡತನದ ಬೇಯ್ಗೆಯಲ್ಲಿಯೂ ಜನರಿಗೆ ನೆಮ್ಮದಿ ಇತ್ತು. ಈ ಮಹೋನ್ನತ ಕಾಲದಲ್ಲಿ ಕಾವೇರಿ ನದಿ, ನಭದಿಂದ ಭೊರ್ಗರೆದು ದುಮ್ಮಿಕ್ಕಿದ ಗಂಗೆಯಂತೆ ಭುವಿಯನ್ನು ಪಾವನಗೋಳಿಸಿದ್ದಳು. ಹಾಗೆ ತಾಯಿ ಕಾವೇರಿ ಪುನೀತಗೋಳಿಸಿದ್ದ ಅನೇಕ ಪುಣ್ಯಭೂಮಿಗಳಲ್ಲಿ ಒಂದು ಅಂಜನಾಪುರ. ಗ್ರಾಮವೂ ಅಲ್ಲದ ನಗರವು ಅಲ್ಲದ ಪುಟ್ಟ ಸ್ಥಳ. ನದಿಯ ನೀರು ಕಾಲುವೆಗಳಲ್ಲಿ ಹರಿದು ಊರಿನ ಹೂತೋಟ, ತೆಂಗು, ಕಂಗು, ಮಾವಿನತೋಟ, ಹೊಲಗದ್ದೆಗಳನ್ನು ಹಸಿರನ್ನಾಗಿಸಿತ್ತು. ಅಂದು ಪಶ್ಚಿಮಕ್ಕೆ ಸಾಗಿದ್ದ ನೇಸರನಿಂದ, ಬಾನು ಹೊನ್ನ ಕೆಂಪು ಬಣ್ಣಕ್ಕೆ ತಿರುಗಿತ್ತು. ಪಶ್ಚಿಮದಲ್ಲಿ ಮುಳುಗುತ್ತಿದ್ದ ಸೂರ್ಯನು ಆಕಾಶಕ್ಕೆ ತಂದ ಕೆಂಪು ಬಣ್ಣ ನೀರಿನ ಮೇಲೆಯೂ ಪ್ರತಿಫಲಿಸುತ್ತಿತ್ತು. ಗೂಡು ಸೇರಲು ಆಕಾಶದಲ್ಲಿ ಹೋಗುತ್ತಿದ್ದ ಹಕ್ಕಿಯ ಸಾಲುಗಳು ಮತ್ತು ಪ್ರವಾಹಿನಿಯ ಎರಡು ಬದಿಯಲ್ಲಿನ ಇಳೆಯು ಹಸಿರು ಬಣ್ಣಕ್ಕೆ, ಅಂಬರದಲ್ಲಿ ಮೆಲ್ಲಗೆ ಮೂಡುತ್ತಿದ್ದ ತಿಳಿ ಕೆಂಪು ಬಣ್ಣವೂ ಸೇರಿ, ಆ ದೇವನ ಕುಂಚದಲ್ಲಿ ಮೂಡಿ ಬಂದ ಸುಂದರ ಚಿತ್ರದಂತೆ ಕಾಣುತ್ತಿತ್ತು.
Reviews
There are no reviews yet.