Description
ಬೇಂದ್ರೆ ಕಾವ್ಯ ತಾಯ ಎದೆಹಾಲ ಚಿಲುಮೆಯಂತೆ. ಕಾವ್ಯದ ಮಾಯೆ, ಮೋಡಿ ಸುಮ್ಮನೆ ಮಂತ್ರ ಹಾಕಿದರೆ ಬರುವುದಿಲ್ಲ. ಬೇಂದ್ರೆ ಕಾವ್ಯದ ಶಬ್ದಶಿಲ್ಪ ಅತ್ಯುನ್ನತವಾದದ್ದು. ಅದು ಸಾಧ್ಯವಾದದ್ದು ನಾದಲೀಲೆಯ ಶಬ್ದಬ್ರಹ್ಮನ ಧ್ಯಾನದಿಂದ. ಶಬ್ದವೂ ಬ್ರಹ್ಮವೇ… ಅದರ ನಾದವೂ ಲೀಲೆಯೇ… ಇವುಗಳಿಂದಲೇ ಒಂದು ಭಾವದ ತೊಟ್ಟಿಲ ಜೀವ ನಮ್ಮ ಮನದಲ್ಲಿ ಜೋಗುಳದಂತೆ ತೂಗಾಡುವುದು. ಇಂತಹ ಒಬ್ಬ ಶ್ರೇಷ್ಠ ಕವಿಯ ಬಗ್ಗೆ ನನ್ನ ಹಳೆಯ ತಕರಾರುಗಳನ್ನು ಅತ್ತ ಇಟ್ಟು, ಬೇಂದ್ರೆ ಕಾವ್ಯದ ಶಬ್ದ ಚಮತ್ಕಾರದ ಲಯ ವಿನ್ಯಾಸಗಳ ಸೌಂದರ್ಯ ಮೀಮಾಂಸೆಯನ್ನು ಅರ್ಥಬದ್ಧವಾಗಿ ಡಾ. ಜಿ. ಕೃಷ್ಣಪ್ಪ ಅವರು ವಿವರಿಸಿರುವರು.
ಈ ಕಾಲಕ್ಕೆ ಬೇಕಾಗಿದ್ದ ಇಂತಹ ಒಂದು ಬೇಂದ್ರೆ ಕಾವ್ಯದ ಅಧ್ಯಯನವನ್ನು ಪುಟ್ಟ ಪುಟ್ಟ ಹೆಜ್ಜೆಗಳಲ್ಲಿ, ನುಡಿ ಬೆಡಗ ಬೆಳಗಲ್ಲಿ, ಬಹಳ ಅಚ್ಚುಕಟ್ಟಾಗಿ ಡಾ. ಜಿ. ಕೃಷ್ಣಪ್ಪ ಪ್ರಾಮಾಣಿಕವಾಗಿ, ಗಾಢವಾಗಿ, ತನ್ಮಯವಾಗಿ ಬೇಂದ್ರೆ ಕಾವ್ಯದಲ್ಲಿ ಲೀನವಾಗಿ ಮಾಡಿದ್ದಾರೆ. ಬೇಂದ್ರೆ ಕಾವ್ಯ ತತ್ವವನ್ನು ಎಂಟು ಪಾದಗಳಲ್ಲಿ ಇವರು ಆಯ್ದ ಪದ್ಯಗಳ ವಿವೇಚನೆಯಿಂದ ನಿರೂಪಿಸುತ್ತಾರೆ. ಕೇವಲ ಆಸ್ವಾದನೆಯ ಹಂತ ದಾಟಿ, ಧ್ಯಾನದ ದಿವ್ಯ ತನ್ಮಯತೆಯ ಮೀರಿ, ಒಬ್ಬ ಜಿಜ್ಞಾಸು ಈ ಬೇಂದ್ರೆ ಎಂಬ ಕಾವ್ಯದಲ್ಲಿ ಏನನ್ನು ಕಂಡುಕೊಂಡ ಎಂಬುದನ್ನು ಸುಂದರವಾಗಿ ಭಾವದೀಪ್ತಿಯು ಹೊಂದಿಕೊಂಡು ನಿಜ ನಿಜ ಎಂಬಂತೆ ಕಂಡರಿಸುವರು.
Reviews
There are no reviews yet.