Description
ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧ.
ಹಾಗೆಂದು ಆಸೆ ಇಲ್ಲದ ಮನುಷ್ಯನನ್ನು ತೋರಿಸಿ ನೋಡೋಣ. ಈ ಜಗತ್ತಿನಲ್ಲಿ ಒಂದಲ್ಲ ಒಂದು ವಸ್ತುವಿಗೆ, ಸಂಗತಿಗೆ ಆಸೆ ಪಡದ ವ್ಯಕ್ತಿಯೊಬ್ಬ ಇರಲಿಕ್ಕೆ ಸಾಧ್ಯವಾ? ಆಸೆಯೇ ದುಃಖಕ್ಕೆ ಕಾರಣವೆಂದರೂ ಮನುಷ್ಯ ಆಸೆ ಪಡದೇ ಇರಲಾರ. ಅದು ಅವನ ಸಹಜ ಗುಣ.
ಇಂತಹ ಆಸೆಗೆ ಮಹತ್ವಾಕಾಂಕ್ಷೆ ಸೇರಿದರೆ ಸಾಧನೆಯ ಹಸಿವಾಗುತ್ತದೆ. ಹೀಗಾಗದೆ ಇದರ ಜೊತೆಗೆ ಮೋಹ, ಲೋಭ ಸೇರಿದರೆ ಆಸೆ ಎನ್ನುವುದು ದುರಾಸೆಯಾಗುತ್ತದೆ. ದುರಾಸೆ ಒಂದು ಕ್ಷಣ ಹೆಚ್ಚಿಗೆ ಮನಸ್ಸಿನಲ್ಲಿ ಕೂತುಬಿಟ್ಟರೆ ಸ್ವಾರ್ಥವಾಗಿ ಬದಲಾಗುತ್ತದೆ. ಸ್ವಾರ್ಥಕ್ಕೆ ಬಿದ್ದ ಮನುಷ್ಯ ಹೇಗೆಲ್ಲಾ ಆಡುತ್ತಾನೆನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.
ಒಂದು ಆಸೆ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಲೂ ಬಹುದು.
ಹಾಗೆಂದು ಆಸೆ ತೊರೆದ ಮನುಷ್ಯ ಈ ಜಗತ್ತಿನಲ್ಲಿ ಮನುಷ್ಯನೆಂದು ಕರೆಸಿಕೊಳ್ಳುವುದಿಲ್ಲ. ಮನುಷ್ಯನೆಂದ ಮೇಲೆ ಆಸೆ ಇರಲೇಬೇಕು. ಆ ಆಸೆ ಸಾತ್ವಿಕವಾಗಿದ್ದು, ನೈತಿಕತೆಯ ದಾರಿಯಲ್ಲಿ ಇರಬೇಕು. ನಮ್ಮ ಈ ಆಸೆಗಳು ಸರಿಯಾದ ದಿಕ್ಕಿನಲ್ಲೇ ಇದ್ದರೂ ಅದು ಕೈಗೂಡದೇ ನಿರಾಶೆ ತರಬಹುದು, ಬೇಸರ ಮೂಡಿಸಬಹುದು. ಬದುಕಿನ ಚಿಕ್ಕ ಚಿಕ್ಕ ಆಸೆಗಳು ಬೇಗನೇ ನೆರವೇರಿಬಿಡುತ್ತವೆ. ಅದೇ ದೊಡ್ಡದಕ್ಕೆ ಆಸೆ ಪಟ್ಟರೆ? ಅದು ನಮ್ಮ ಸಾಮರ್ಥ್ಯಕ್ಕೆ ಮೀರಿದ್ದು ಎಂದೆನ್ನಿಸಿದರೂ ಕೈಗೆಟುಕದೆ ಇರುವಷ್ಟು ದೂರವೇನಲ್ಲ. ಎಟುಕಿಸಿಕೊಳ್ಳಲೇಬೇಕೆಂದು ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟರೆ, ಶ್ರಮ ಪಟ್ಟರೆ ಸಿಕ್ಕಬಹುದು. ಹಾಗಿದ್ದೂ ನಿರೀಕ್ಷೆಗೆ ತಕ್ಕಂತೆ ಯಾವುದೂ ನಡೆಯುವುದಿಲ್ಲ. ಇಂತಹ ಸೋಲು, ನಿರಾಶೆ ನಮ್ಮನ್ನು ಕಾಡುತ್ತಲೇ ಇರುತ್ತದೆ. ಬದುಕಿನುದ್ದಕ್ಕೂ ನಮ್ಮ ಹಣೆಯಲ್ಲಿ ಬರೆದಿದ್ದೇ ಇಷ್ಟು ಎಂದು ಹಳಹಳಿಸುತ್ತಲೇ ಇರುತ್ತೇವೆ.
ಹಾಗಾದರೆ ಆಸೆ ಪಡಲೇಬಾರದಾ? ಬಡ ಮಧ್ಯಮವರ್ಗದ ಅದೆಷ್ಟೋ
ಮಂದಿಗೆ ಈ ಪ್ರಶ್ನೆ ಬೆನ್ನು ಬಿಡದೆ ಕಾಡುತ್ತಲೇ ಇರುತ್ತದೆ. ಬಡ ಮಧ್ಯಮವರ್ಗದಲ್ಲಿ ಬೆಳೆದ ಆಕೆಗೆ ತಾನೊಬ್ಬ ಡಾಕ್ಟರ್ರೋ, ಇಂಜಿನಿಯರ್ರೋ ಆಗಬೇಕೆಂಬ ಆಸೆಯಿರುತ್ತದೆ. ಆದರೆ ಆಕೆಯ ಆಸೆ ಪೂರೈಸುವ ಪೂರಕವಾದ ಪ್ರೋತ್ಸಾಹಕರ ವಾತಾವರಣ ಕುಟುಂಬದಲ್ಲಿ ಇರುವುದಿಲ್ಲ. ಹೀಗಿದ್ದಾಗ ಎಷ್ಟೋ ಬಾರಿ ಅವರು ತಮ್ಮ ಆಸೆಯನ್ನು ಯಾರಲ್ಲಿಯೂ ಹೇಳಿಕೊಳ್ಳದೆ ತಮ್ಮಲ್ಲಿಯೇ ಉಳಿಸಿಕೊಂಡು ಬಿಡುತ್ತಾರೆ.
Reviews
There are no reviews yet.